ಶಿವಮೊಗ್ಗ: ನವರಾತ್ರಿ ಹಬ್ಬಕ್ಕೆ ದೇವಸ್ಥಾನಕ್ಕೆ ಹಾಕಿದ್ದ ವಿದ್ಯುತ್ ದೀಪಾಲಂಕಾರದಲ್ಲಿ (Electric Lighting) ವಿದ್ಯುತ್ ಪ್ರವಹಿಸಿ ಬಾಲಕನೋರ್ವ ಮೃತಪಟ್ಟಿದ್ದಾನೆ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಘಟನೆ ಸಂಭವಿಸಿದೆ.
ಹಾಡೋನಹಳ್ಳಿ ಗ್ರಾಮದ ಮಹೇಶ್ ರಾವ್, ಆಶಾ ದಂಪತಿ ಪುತ್ರ ಸಮರ್ಥ (14) ಮೃತ ದುರ್ದೈವಿ. ಇಲ್ಲಿನ ಅಂಬಾ ಭವಾನಿ ದೇವಸ್ಥಾನಕ್ಕೆ ದಸರಾ ಅಂಗವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ದೇವಸ್ಥಾನದ ಬಳಿ ತೆರಳಿದ್ದ ಸಮರ್ಥ ಗೇಟ್ ಮುಟ್ಟಿದ್ದಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.
ಸೀರಿಯಲ್ ಸೆಟ್ನ ವಯರ್ನಲ್ಲಿ ಸ್ಕಿನ್ ಔಟ್ ಆಗಿರುವ ಶಂಕೆ ಇದೆ. ವಿದ್ಯುತ್ ಶಾಕ್ನಿಂದ ಅಸ್ವಸ್ಥನಾಗಿದ್ದ ಸಮರ್ಥನನ್ನು ಕೂಡಲೆ ಹೊಳಲೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆ ವೇಳೆಗೆ ಸಮರ್ಥ ಕೊನೆಯುಸಿರೆಳೆದಿದ್ದ ಎಂದು ತಿಳಿದು ಬಂದಿದೆ. ಇಂದು ಹಾಡೋನಹಳ್ಳಿಯಲ್ಲಿ ಸಮರ್ಥನ ಅಂತ್ಯಕ್ರಿಯೆ ನೆರವೇರಿತು. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
 








