ಬೆಂಗಳೂರು: ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಆಶ್ರಯದಲ್ಲಿ ರಾಜ್ಯಮಟ್ಟದ ಮಹತ್ವದ ವಿಚಾರ ಸಂಕಿರಣವು 18 ಸೆಪ್ಟೆಂಬರ್ 2025, ಗುರುವಾರ, ಬೆಳಿಗ್ಗೆ 10.30ಕ್ಕೆ, ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಈ ವಿಚಾರ ಸಂಕಿರಣದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯ ಸಾಧಕ-ಬಾಧಕಗಳನ್ನು ಆಳವಾಗಿ ಚರ್ಚಿಸಲಾಗುವುದು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 22 ಸೆಪ್ಟೆಂಬರ್ 2025ರಿಂದ ಆರಂಭಿಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಬಲಗೈ ಜಾತಿಯವರು ತಮಗೆ ಇರುವ ಜವಾಬ್ದಾರಿಗಳನ್ನು ಅರಿತುಕೊಳ್ಳುವ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ದೊರೆಯಲಿದೆ.
ಸಮೀಕ್ಷೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಬಲಗೈ ಸಂಬಂಧಿತ ಜಾತಿಯವರು ತಮ್ಮ ಜಾತಿಯನ್ನು ಏಕರೂಪವಾಗಿ ನಮೂದಿಸುವುದು ಅತ್ಯಂತ ಅಗತ್ಯ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಏಕರೂಪದ ನಮೂದು ಇಲ್ಲದಿದ್ದರೆ ಸಮುದಾಯದ ಹಿತಾಸಕ್ತಿಗಳು ಹಾನಿಯಾಗುವ ಸಾಧ್ಯತೆ ಇರುವುದರಿಂದ, ಈ ವಿಚಾರದಲ್ಲಿ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದಲೇ ಈ ರಾಜ್ಯಮಟ್ಟದ ಸಭೆ ಆಯೋಜಿಸಲಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಲಗೈ ಜಾತಿಯ ಕುಲಬಂಧುಗಳು, ಸಂಘಟನೆಗಳ ಮುಖಂಡರು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ವಿಚಾರ ಸಂಕಿರಣಕ್ಕೆ ಹಾಜರಾಗುವಂತೆ ಒಕ್ಕೂಟವು ಮನವಿ ಮಾಡಿದೆ. ಸಮುದಾಯದ ಒಗ್ಗಟ್ಟು ಮತ್ತು ಹಕ್ಕುಗಳನ್ನು ಕಾಪಾಡಿಕೊಳ್ಳಲು ಈ ಸಮಾರಂಭವು ಮಹತ್ತರ ವೇದಿಕೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಲಗೈ ಜಾತಿ ಸಮುದಾಯದ ಹಕ್ಕು-ಹಿತಾಸಕ್ತಿಗಳನ್ನು ಬಲಪಡಿಸುವತ್ತ ಈ ವಿಚಾರ ಸಂಕಿರಣವು ದಿಕ್ಕು ತೋರಿಸುವಂತದ್ದು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಒಗ್ಗಟ್ಟಿನಿಂದ ಬಲಗೈ ಸಮುದಾಯದ ಧ್ವನಿಯನ್ನು ಬಲಪಡಿಸುವಂತೆ ಸಂಘಟಕರ ಕೋರಿಕೆಯಿದೆ.
ಧನ್ಯವಾದಗಳೊಂದಿಗೆ – ಜೈ ಬೀಮ್.
ವರದಿ ಶಶಿಧರ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ