ಬಸವನಗುಡಿ: ತ್ರಿಪದಿ ಬ್ರಹ್ಮ ಸರ್ವಜ್ಞ ದಿನಾಚರಣೆಯನ್ನು ಅಖಿಲಭಾರತ ವೀರಶೈವ ಮಹಾಸಭ ತಾಲ್ಲೂಕು ಯುವ ಘಟಕದ ಅಧ್ಯಕ್ಷ ನವೀನ ವಾರದ್ ಅವರ ಅಧ್ಯಕ್ಷತೆಯಲ್ಲಿ ಬಸವನಗುಡಿ ಸ್ಪೋರ್ಟ್ಸ್ ಕಲ್ಚರ್ ಕ್ಲಬ್ನಲ್ಲಿ ಇಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಕುಂಬಾರ ಸಮಾಜದ ಅಧ್ಯಕ್ಷ ಹಾಲೇಶ್ ಅವರು, ತ್ರಿಪದಿ ಬ್ರಹ್ಮ ಸರ್ವಜ್ಞರ ವಚನಗಳ ಮಹತ್ವ ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಮಾಹಿತಿ ನೀಡಿದರು.
ಅಖಿಲಭಾರತ ವೀರಶೈವ ಮಹಾಸಭದ ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್ ಅವರು ತ್ರಿಪದಿ ಬ್ರಹ್ಮ ಸರ್ವಜ್ಞರ ಜೀವನ ಹಿನ್ನಲೆ ಕುರಿತು ಮಾತನಾಡುತ್ತಾ, ಸರ್ವಜ್ಞರು ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರಿನಲ್ಲಿ. ಈ ಗ್ರಾಮ ಈಗ ‘ಸರ್ವಜ್ಞನ ಅಬಲೂರ’ ಎಂದೇ ಪ್ರಸಿದ್ಧಿ ಪಡೆದಿದೆ ಎಂದರು.
ಅವರ ಹೆತ್ತ ತಾಯಿ ಕುಂಬಾರ ಮಾಳೆ. ಪ್ರೀತಿಯಿಂದ ಇಡಲಾದ ನಾಮ ‘ಪುಷ್ಪದತ್ತ’. ಸಾಕು ತಾಯಿ ಮಲ್ಲಕ್ಕ, ತಂದೆ ಬಸವರಸ ಎಂದು ವಿವರಿಸಿದರು. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬಸವರಸ ಅವರಿಗೆ ಸಂತಾನಪ್ರಾಪ್ತಿಗಾಗಿ ಕಾಶೀ ಕ್ಷೇತ್ರಕ್ಕೆ ತೆರಳಿ ಭಕ್ತಿಯಿಂದ ಸೇವೆ ಸಲ್ಲಿಸಿದ ಫಲವಾಗಿ, ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ ಪುತ್ರಪ್ರಾಪ್ತಿಯ ವರ ನೀಡಿದ ಕಥೆಯನ್ನು ವಿವರಿಸಿದರು.
ಕಾಶಿಯಿಂದ ಹಿಂದಿರುಗುವ ಮಾರ್ಗದಲ್ಲಿ ಅಂಬಲೂರ ಗ್ರಾಮದಲ್ಲಿ ಕುಂಬಾರ ಮಾಳೆಯ ಮನೆಗೆ ವಾಸವಾಗಿದ್ದ ಸಂದರ್ಭದಿಂದ ಪುಷ್ಪದತ್ತನ ಜನನವಾಗಿದ್ದು, ಮುಂದೆ ಅವನೇ ಜಗತ್ತಿಗೆ ತ್ರಿಪದಿ ಬ್ರಹ್ಮ ಸರ್ವಜ್ಞನಾಗಿ ಪ್ರಸಿದ್ಧಿಯಾದನು ಎಂದು ತಿಳಿಸಿದರು.
ಬಾಲ್ಯದಲ್ಲಿಯೇ ಶಿವನ ವರಪ್ರಸಾದದಿಂದ ಅಪಾರ ಪಾಂಡಿತ್ಯವನ್ನು ಪಡೆದ ಸರ್ವಜ್ಞನು, ವಿವಿಧ ಪುಣ್ಯಕ್ಷೇತ್ರಗಳು ಹಾಗೂ ಗುರುಮಠಗಳನ್ನು ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿ ಎಲ್ಲಾ ಶಾಸ್ತ್ರಗಳಲ್ಲಿ ಪರಿಣತಿ ಗಳಿಸಿದ್ದಾನೆ ಎಂದು ಹೇಳಿದರು.
ಸರ್ವಜ್ಞರ ತ್ರಿಪದಿಗಳು ಹಾಗೂ ವಚನಗಳು ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ಅವನಿಂದ ರಚಿತವಾದ ಸುಮಾರು 1300 ವಚನಗಳು ಲಭ್ಯವಿವೆ ಎಂಬುದು ತಜ್ಞರ ಅಭಿಪ್ರಾಯ ಎಂದು ತಿಳಿಸಿದರು.
ಈದೆ ಸಂದರ್ಭದಲ್ಲಿ ಇತ್ತಿಚೆಗೆ ತ್ಯಾಜವಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ರಾಗಿ ಆಯ್ಕೆಯಾದ ಸತೀಶ್ ಮುಂಚೆಮನೆ ಅವರಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಅಖಿಲಭಾರತ ವೀರಶೈವ ಮಹಾಸಭದ ಮಾಧ್ಯಮ ಘಟಕದ ಅಧ್ಯಕ್ಷರು ಸೋಮನಾಥ, ಗೀತಾ ರವೀಂದ್ರ, ಸಂದೀಪ್, ಮುತ್ತಣ್ಣ, ಉಮೇಶ್ ಕೆ.ಬಿ ಹಾಗೂ ಸದಸ್ಯರು ಭಾಗವಹಿಸಿದ್ದರು.









