ಶಿವಮೊಗ್ಗ ನಗರದ ಮಧ್ಯಭಾಗದಲ್ಲಿರುವ ಬರ್ಮಪ್ಪನಗರದ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ತಟಾಕಿ ಮಠಕ್ಕೆ ಸೇರಿದ ಸುಮಾರು 2 ಎಕರೆಗೂ ಅಧಿಕ ಜಮೀನಿನ ವಿವಾದ ಇತ್ತೀಚೆಗೆ ಮಹತ್ವದ ತಿರುವು ಪಡೆದಿದೆ.
ಈ ವಿಚಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ, ಇತ್ತೀಚಿನ ನ್ಯಾಯಾಲಯ ತೀರ್ಪು ಮಠದ ಪರವಾಗಿ ಬಂದಿರುವುದು ಗಮನಾರ್ಹವಾಗಿದೆ.
ಈ ಹಿನ್ನೆಲೆಯಲ್ಲಿ, ಬರ್ಮಪ್ಪನಗರದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಕುಟುಂಬಗಳ ಪರಿಸ್ಥಿತಿ ಕುರಿತು ಚಿಂತನೆ ನಡೆಸಲಾಗಿದೆ. ಅವರಿಗೆ ಪರ್ಯಾಯ ವಸತಿ ಕಲ್ಪಿಸಬೇಕೆಂಬ ಉದ್ದೇಶದಿಂದ ಇಂದು ಬೆಳಗ್ಗೆ ಮಾನ್ಯ ಶಾಸಕ ಎಸ್. ಎನ್. ಚನ್ನಬಸಪ್ಪ ಅವರ ನೇತೃತ್ವದಲ್ಲಿ ವಸತಿ ಸಚಿವ ಬಿ. ಜಡ್. ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಸ್. ಎಸ್. ಜ್ಯೋತಿಪ್ರಕಾಶ್, ಸಹ ಕಾರ್ಯದರ್ಶಿ ಬಳ್ಳೆಕೆರೆ ಸಂತೋಷ ಹಾಗೂ ಇತರ ನಿರ್ದೇಶಕರುಗಳು ಭಾಗವಹಿಸಿ, ಮಠದ ಜಮೀನು ವಿಚಾರ ಹಾಗೂ ಅಲ್ಲಿನ ನಿವಾಸಿಗಳಿಗೆ ನ್ಯಾಯಯುತ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.
ಈ ಭೇಟಿಯಿಂದ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುವ ನಿರೀಕ್ಷೆ ವ್ಯಕ್ತವಾಗಿದ್ದು, ಸ್ಥಳೀಯ ನಿವಾಸಿಗಳಿಗೂ ನೂತನ ವಸತಿ ವ್ಯವಸ್ಥೆ ಕಲ್ಪಿಸುವತ್ತ ಸರ್ಕಾರದ ಗಮನ ಸೆಳೆಯಲಾಗಿದೆ.






