ಶಿವಮೊಗ್ಗ: ಅತ್ತೆ–ಸೊಸೆ ನಡುವಿನ ಜಗಳವು ಗಂಭೀರ ರೂಪ ಪಡೆದುಕೊಂಡಿದ್ದು, ತಾಯಿಯ ಮೇಲೆಯೇ ಮಗ ಹಲ್ಲೆ ನಡೆಸಿ ಜೈಲು ಸೇರಿದ ಘಟನೆ ಶಿವಮೊಗ್ಗ ನಗರದ ಮಾರ್ನಮಿಬೈಲು ಎನ್.ಟಿ. ರಸ್ತೆ ಪ್ರದೇಶದಲ್ಲಿ ನಡೆದಿದೆ.
ಈ ಸಂಬಂಧ ದೋಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದ ವಿವರ:
ಪೀಡಿತೆ ಶ್ರೀಮತಿ ಲಲಿತಮ್ಮ ನೀಡಿದ ದೂರಿನ ಪ್ರಕಾರ, ಘಟನೆ ನಡೆದ ದಿನ ಅವರು ಮನೆಯಲ್ಲಿ ಮಲಗಿದ್ದ ವೇಳೆ, ಅವರ ಮಗ ಹರೀಶ್ ಬಾಬು ಮನೆಗೆ ಬಂದು ಬಾಗಿಲು ಬಡಿದು ತೆಗೆಯುವಂತೆ ಒತ್ತಾಯಿಸಿದ್ದಾನೆ. ಬಾಗಿಲು ತೆರೆಯದಿದ್ದಾಗ ಅವಾಚ್ಯ ಶಬ್ದಗಳಿಂದ ಬೈದು, “ನನ್ನ ಹೆಂಡತಿಯ ಮೇಲೆ ಕೇಸ್ ಕೊಡುತ್ತೀಯಾ, ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.
ನಂತರ ಮನೆಯ ಹಿಂಬಾಗಿಲಿಗೆ ಹೋಗಿ ಕಬ್ಬಿಣದ ರಾಡ್ ಬಳಸಿ ಬೀಗ ಒಡೆದು ಒಳನುಗ್ಗಿದ ಹರೀಶ್ ಬಾಬು, ನೇರವಾಗಿ ತಾಯಿ ಇದ್ದ ಕೋಣೆಗೆ ಹೋಗಿ ಮತ್ತೆ ಜಗಳ ಆರಂಭಿಸಿದ್ದಾನೆ. ಈ ವೇಳೆ ತಾಯಿಯ ಕುತ್ತಿಗೆಯನ್ನು ಹಿಸುಕಿಕೊಂಡು ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ತಾಯಿ ಕೂಗಾಡಿದಾಗ ಸೊಸೆ ಮತ್ತು ವೇಣುಗೋಪಾಲ ಹಾಗೂ ಇತರರು ಸ್ಥಳಕ್ಕೆ ಬಂದು ಮಧ್ಯಪ್ರವೇಶ ಮಾಡಿ ಜಗಳ ಬಿಡಿಸಿದ್ದಾರೆ. ಆದರೆ ಹರೀಶ್ ಬಾಬು ಅವರ ಮೇಲೂ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಬಳಿಕ 112 ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಲಲಿತಮ್ಮ ಅವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಹಿಂದಿನ ಪ್ರಕರಣಗಳು:
ಹರೀಶ್ ಬಾಬು ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದು, ಅವುಗಳ ವಿವರ ಈ ಕೆಳಗಿನಂತಿವೆ:
Crime No: 0190/2018
Crime No: 0011/2023
Crime No: 0184/2025
Crime No: 0130/2026
ಹಲವಾರು ಬಾರಿ ಎಫ್ಐಆರ್ ದಾಖಲಾಗಿದ್ದರೂ ಮತ್ತು ಜೈಲು ಶಿಕ್ಷೆ ಅನುಭವಿಸಿದ್ದರೂ ಕೂಡ ಹರೀಶ್ ಬಾಬುವಿನ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.





