ಕಾಡಾನೆ ದಾಳಿಯಿಂದ ಆಯನುರು ಇಟ್ಟಿಗೆಹಳ್ಳಿಯಲ್ಲಿ  ಕೃಷಿಕರ ಬಾಳೆ ಹಾನಿ.!?

0
189

ಅರಣ್ಯ ಇಲಾಖೆಗೆ ಗ್ರಾಮಸ್ಥರ ಆಕ್ರೋಶ

ಶಿವಮೊಗ್ಗ ತಾಲೂಕಿನ ಆಯನುರು ಹಾಗೂ ಇಟ್ಟಿಗೆಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಆರ್ಭಟ ಮತ್ತೆ一 ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ಇಟ್ಟಿಗೆಹಳ್ಳಿಯ ಸರ್ವೆ ನಂ.32ರಲ್ಲಿ ಕೃಷಿಕ ಮಂಜಪ್ಪ ಶಶಿಧರ್ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಆನೆ ದಾಳಿ ನಡೆಸಿದ್ದು, ಸುಮಾರು ಒಂದೂವರೆ ಎಕರೆ ಬಾಳೆಗಿಡಗಳನ್ನು ಸಂಪೂರ್ಣ ನಾಶಪಡಿಸಿದೆ.

ಕೃಷಿಕರ ಹೇಳಿಕೆ ಪ್ರಕಾರ, ಬಾಳೆ ಪಸಲಿಗೆ ಬಂದು  ಸಮೃದ್ಧವಾಗಿ ಬೆಳೆದು, ಕೊಯ್ಲಿಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ನೂರಾರು ಗಿಡಗಳನ್ನು ಹಾಳುಮಾಡಿವೆ. ಇದರಿಂದ ಮಂಜಪ್ಪ ಶಶಿಧರ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದು ಖಚಿತವಾಗಿದೆ.

ಈ ಘಟನೆ ಕುರಿತು ಮಾಹಿತಿ ಪಡೆದ ಸಿರಿಗೆರೆ ಅರಣ್ಯ ವಲಯದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಇದು ಕೇವಲ ಒಂದು ಬಾರಿ ನಡೆದ ಘಟನೆ ಅಲ್ಲ. ಕಳೆದ ಹಲವು ತಿಂಗಳಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಆದರೆ ಅರಣ್ಯ ಇಲಾಖೆ ಯಾವ ತರಹದ ಪರಿಣಾಮಕಾರಿ ಕ್ರಮವನ್ನೂ ಕೈಗೊಂಡಿಲ್ಲ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಕ್ಷಣ ನಷ್ಟದ ವರದಿ ಸಿದ್ಧಪಡಿಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. “ಕಾಡಾನೆಗಳು ಬೆಳೆ ಹಾನಿ ಮಾಡಿದಾಗ ಮಾತ್ರ ಅಧಿಕಾರಿಗಳು ಬೇಟಿ ನೀಡುವುದು ಸಾಲದು. ಮೂಲಭೂತ ತಡೆಗೋಡೆ, ವಿದ್ಯುತ್ ತಂತಿ, ಹಾಗೂ ಇತರ ನಿರೋಧಕ ಕ್ರಮಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು” ಎಂಬುದು ಗ್ರಾಮಸ್ಥರ ತೀವ್ರ ಒತ್ತಾಯ.

ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಾಡಾನೆ ಹಾವಳಿಯ ನಿಯಂತ್ರಣಕ್ಕಾಗಿ ಸೂಕ್ತ ಮತ್ತು ಶಾಶ್ವತ ಪರಿಹಾರ ನೀಡುವಂತೆ ಗ್ರಾಮದ ಜನತೆ ಸರ್ಕಾರ ಹಾಗೂ ಅರಣ್ಯ ಇಲಾಖೆಯನ್ನು ಕೇಳಿಕೊಳ್ಳುತ್ತಿದ್ದಾರೆ.