ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬೆಳವಣಿಗೆಯೊಂದರಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಗೆ ಭೇಟಿ ನೀಡಿದ್ದರು. ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಉಪಾಹಾರ (ಬ್ರೇಕ್ ಫಾಸ್ಟ್) ಮುಗಿಸಿದ ಡಿಕೆಶಿ, ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಸರ್ಕಾರದ ಪ್ರಮುಖ ನಿರ್ಧಾರಗಳ ಕುರಿತು ಕೆಲಕಾಲ ಚರ್ಚೆ ನಡೆಸಿದರು ಎನ್ನಲಾಗಿದೆ.
ಸದಾಶಿವನಗರ ನಿವಾಸಕ್ಕೆ ವಾಪಸ್: ಸಿಎಂ ಭೇಟಿಯ ನಂತರ ನೇರವಾಗಿ ಸದಾಶಿವನಗರದಲ್ಲಿರುವ ತಮ್ಮ ಸ್ವಗೃಹಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮರಳಿದರು. ಸಿಎಂ ನಿವಾಸದ ರಾಜಕೀಯ ಮಾತುಕತೆಯ ಬೆನ್ನಲ್ಲೇ, ಡಿಕೆಶಿ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ಆರಂಭವಾದವು. ಮನೆಯಲ್ಲಿ ಕೆಲಕಾಲ ವಿಶ್ರಮಿಸಿದ ಅವರು, ಪ್ರಮುಖ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸಜ್ಜಾದರು.
ಪುತ್ರಿ ಜೊತೆ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ: ತಮ್ಮ ಸದಾಶಿವನಗರ ನಿವಾಸದಿಂದ ಹೊರಟ ಡಿ.ಕೆ. ಶಿವಕುಮಾರ್ ಅವರು, ತಮ್ಮ ಪುತ್ರಿಯ ಜೊಗೂಡಿಕೊಂಡು ನೇರವಾಗಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಪ್ರಸಿದ್ಧ ನೊಣವಿನಕೆರೆಯ ಕಾಡುಸಿದ್ದೇಶ್ವರ ಅಜ್ಜಯ್ಯನ ಮಠಕ್ಕೆ ಪ್ರಯಾಣ ಬೆಳೆಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನ ಪರಮ ಭಕ್ತರಾಗಿದ್ದು, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಮಠಕ್ಕೆ ಭೇಟಿ ನೀಡುವುದು ಅವರ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ರೂಢಿಯಾಗಿದೆ.
ಪಟ್ಟಾಭಿಷೇಕದ ಮುಹೂರ್ತ ಹಾಗೂ ಪ್ರಮಾಣವಚನಕ್ಕೆ ಸಮಯ ನಿಗದಿ? ವಿಶೇಷವೆಂದರೆ, ಈ ಭೇಟಿಯ ಹಿಂದೆ ಕೇವಲ ಧಾರ್ಮಿಕ ಕಾರಣಗಳಷ್ಟೇ ಇಲ್ಲ, ಬದಲಿಗೆ ದೊಡ್ಡ ರಾಜಕೀಯ ಗಹನತೆಯೂ ಇದೆ ಎಂದು ಹೇಳಲಾಗುತ್ತಿದೆ. ಮಠದ ಶ್ರೀಗಳೊಂದಿಗೆ ಡಿಕೆಶಿ ಅವರು ತಮ್ಮ ಮುಂದಿನ ಮಹತ್ವದ ಪಟ್ಟಾಭಿಷೇಕಕ್ಕೆ (ಅಧಿಕಾರ ಸ್ವೀಕಾರ ಅಥವಾ ಹೊಸ ಜವಾಬ್ದಾರಿ) ಸಂಬಂಧಿಸಿದಂತೆ ಶುಭ ಮುಹೂರ್ತದ ಕುರಿತು ಹಲವು ವಿಚಾರಗಳನ್ನು ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪ್ರಮಾಣವಚನ ಸ್ವೀಕಾರಕ್ಕೆ ಸೂಕ್ತವಾದ ಸಮಯ ಮತ್ತು ದಿನಾಂಕವನ್ನು ಕೇಳಿ ಪಡೆಯಲಿದ್ದಾರೆ ಎಂಬ ದಟ್ಟ ವದಂತಿಗಳು ಕೇಳಿಬರುತ್ತಿವೆ.





